ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಸೌಹಾರ್ದ ಪಟೇಲ್ ಬಂಧನ 

1 year ago

ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸುವ ಮೂಲಕ ಆತಂಕ ಸೃಷ್ಟಿಸಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. 

ಹೊಸ ವರ್ಷದ ಶುಭಾಶಯ ಪತ್ರದೊಂದಿಗೆ ವಿಷಪೂರಿತ ಲಡ್ಡುಗಳನ್ನೊಳಗೊಂಡ ಬಾಕ್ಸ್ ಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದ ಆರೋಪಿಯನ್ನು ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿಯ ಸೌಹಾರ್ದ ಪಟೇಲ್ ಬಂಧಿತ ಆರೋಪಿಯಾಗಿದ್ದು, ಈತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಆರೋಪಿ ಸೌಹಾರ್ದ ಪಟೇಲ್ ಧನಂಜಯ್ ಸರ್ಜಿ ಹೆಸರಿನಲ್ಲಿ ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯ ಅರವಿಂದ್ ಮತ್ತು ಕೆ ಎಸ್ ಪವಿತ್ರಾ ಅವರಿಗೆ ವಿಷಪೂರಿತ ಮಾತ್ರೆ ಪುಡಿ ಮಾಡಿ ಸ್ವೀಟ್ ನಲ್ಲಿ ಮಿಶ್ರಣ ಮಾಡಿದ್ದ ಸ್ವೀಟ್ ಬಾಕ್ಸ್ ಗಳನ್ನು ಡಿಟಿಡಿಸಿ ಕೂರಿಯರ್ ನಲ್ಲಿ ಕಳುಹಿಸಿದ್ದಾನೆ.

ಆರೋಪಿ ಸೌಹಾರ್ದ ಪಟೇಲ್ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಪದವಿ ಪಡೆದಿದ್ದಾನೆ. ಸೌಹಾರ್ದ ಪಟೇಲ್ ಎಲ್ ಎಲ್ ಬಿ ಓದುವಾಗ ತನ್ನದೇ ಕಾಲೇಜಿನ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಯುವತಿಗೆ ಬುದ್ದಿ ಹೇಳಿ ಶಿಕ್ಷಣದತ್ತ ಗಮನಹರಿಸಬೇಕು ಎಂದು ತಾಕೀತು ಮಾಡಿದ್ದರು.

ಅದರಂತೆ ಆಕೆ ಪ್ರೀತಿ ಪ್ರೇಮದ ಆಟ ಬಿಟ್ಟು ಓದಿನ ಕಡೆ ಗಮನ ಹರಿಸಿದ್ದರು. ಇದರಿಂದ ಸೌಹಾರ್ದ ಪಟೇಲ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇದಕ್ಕೆ  ಮಾನಸಿಕ ರೋಗತಜ್ಞ ಅರವಿಂದ್ ಮತ್ತು ಕೆಎಸ್ ಪವಿತ್ರಾ ಬಳಿ ಚಿಕಿತ್ಸೆ ಪಡೆಯುತ್ತಿದ್ದ.ಮಾತ್ರೆಗಳ ಮೇಲೆ ಮಾತ್ರೆಗಳನ್ನು ಕೊಟ್ಟು ತನ್ನನ್ನು ಈ ವೈದ್ಯರು ರೋಗಿಯನ್ನಾಗಿಸಿದ್ದಾರೆ ಎಂದು ವೈದ್ಯರ ಮೇಲೆ ಸೌಹಾರ್ದ ಪಟೇಲ್ ಸಿಟ್ಟಾಗಿದ್ದ.

ಇದೇ ಸಿಟ್ಟಿನಲ್ಲಿ ಮಾತ್ರೆಗಳನ್ನು ಪುಡಿಮಾಡಿ ಸ್ವೀಟ್ ನಲ್ಲಿ ಮಿಶ್ರಣ ಮಾಡಿ ಎಂಎಲ್ಸಿ ಧನಂಜಯ ಸರ್ಜಿ ಹೆಸರಿನಲ್ಲಿ ಕೋರಿಯರ್ ಮೂಲಕ ಕಳುಹಿಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಏನಿದು ಘಟನೆ?: ಹೊಸವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್ ಗಳನ್ನು ಕೋರಿಯರ್ ಮೂಲಕ ಕಳುಹಿಸಲಾಗಿತ್ತು.

ಸ್ವೀಟ್ ಅನ್ನು ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಂಎಲ್ಸಿ ಧನಂಜಯ ಸರ್ಜಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿದ ಪೋಲೀಸರು ಸ್ವೀಟ್ ಅನ್ನು ಲ್ಯಾಬ್ ಗೆ ರವಾನಿಸಿ ತನಿಖೆ ಆರಂಭಿಸಿದ್ದರು.

Leave a Reply