ರವಿ ನಿಂಬರಗಿ ಕುಟುಂಬಸ್ಥರನ್ನು ಭೇಟಿ ಮಾಡಿದ ಜೆಎಂಎಸ್‌-ಕೆಪಿಆರ್‌ಎಸ್‌ ನಿಯೋಗ

4 years ago

ವಿಜಯಪುರ: ಜಿಲ್ಲೆಯ ಅಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಅವಮರ್ಯಾದಾ ಹತ್ಯೆಗೊಳಗಾದ ರವಿ ನಿಂಬರಗಿ ಕುಟುಂಬಸ್ಥರನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಭೇಟಿ ಮಾಡಿ ಘಟನಾವಳಿಯ ಪರಸ್ಥಿತಿ ಬಗ್ಗೆ ಅವಲೋಕಿಸಿದರು.

ತಮ್ಮ ಧರ್ಮದಲ್ಲದ ಯುವಕನೊಂದಿಗೆ ತಮ್ಮ ಮನೆಯ ಮಗಳು ಪ್ರೀತಿಸಿರುವುದರಿಂದ ಯುವಕನನ್ನು ಅಕ್ಟೋಬರ್ 21ರಂದು ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಹತ್ಯೆಗೊಳಗಾದ ರವಿ ನಿಂಬರಗಿ ಕುಟುಂಬದವರಿಗೆ ಅಕ್ಟೋಬರ್‌ 25ರಂದು ಭೇಟಿ ಮಾಡಿದ ನಿಯೋಗದ ಸದಸ್ಯರು ಸಾಂತ್ವನ ಹೇಳಿದರು. ಯುವಕನನ್ನು ಕೊಂದಿದ್ದಾಗಿ ಒಪ್ಪಿಕೊಂಡ ಇಬ್ಬರೊಂದಿಗೆ ಇನ್ನೂ ಆರು ಜನ ಆರೋಪಿಗಳನ್ನು ಬಂಧಿಸಬೇಕು. ಈ ಹತ್ಯೆಯನ್ನು ಸಂಘಟನೆಗಳು ತೀವ್ರವಾಗಿ ಖಂಡಿಸಿದೆ.

ಜನತೆಯ ಮನಸಿನಲ್ಲಿ ಧಾರ್ಮಿಕ ಮೂಲಭೂತವಾದ ಬೆಳೆಯುತ್ತಿರುವ ಅಪಾಯ ಮತ್ತು ಯುವಜನತೆಯ ಬಾಳ ಸಂಗಾತಿಯ ಆಯ್ಕೆಯ ಹಕ್ಕಿನ ಮೇಲಿನ ಧಾಳಿ ಇದಾಗಿದೆ. ಯುವಜನತೆಯನ್ನು ಭಯ ಮತ್ತು ತಲ್ಲಣಕ್ಕೆ ತಳ್ಳುತ್ತಿರುವಂತಹ ಈ ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕು. ಪೊಲೀಸ್ ಇಲಾಖೆಯು ಕೂಡಲೇ ಇನ್ನುಳಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ. ಹತ್ಯೆಯಾದ ಯುವಕನ ವೃದ್ಧ ತಾಯಿಗೆ ಪರಿಹಾರ ಕಾಯ್ದೆಯಡಿಯಲ್ಲಿ ಪರಿಹಾರಧನ ಒದಗಿಸಿ ಅವರ ಉಪಜೀವನಕ್ಕೆ ಸ್ಪಂದಿಸಬೇಕೆಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ ನೀಲಾ, ಅಫಜಲಪುರ ತಾಲ್ಲೂಕಿನ ಮುಖಂಡರಾದ ಬಸ್ಸಮ್ಮ ಗುತ್ತೆದಾರ, ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ದ ಕಲಬುರಗಿ ಜಿಲ್ಲಾ ಮುಖಂಡ ಶ್ರೀಮಂತ ಬಿರಾದಾರ ಮತ್ತು ಸಾಹಿತಿ  ಡಾ.ಪ್ರಭು ಖಾನಾಪುರೆ ನೇತೃತ್ವದ ನಿಯೋಗ ಭೇಟಿ ಮಾಡಿತು.

Leave a Reply