ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಮಧ್ಯಾಹ್ನ 1.30 ರಿಂದ 2 ಗಂಟೆಯ ನಡುವೆ ನಡೆದಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುದ್ದಾರೆ.
ಬೆಂಗಳೂರು: ವೈಟ್ಫೀಲ್ಡ್ ನ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಲಘು ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಸುಸಜ್ಜಿತ ಸಿಬ್ಬಂದಿ, ಗಾಯಗೊಂಡವರಲ್ಲಿ ಮಹಿಳಾ ಗ್ರಾಹಕರು ಮತ್ತು ಮೂವರು ಶುಚಿಗೊಳಿಸುವ ಸಿಬ್ಬಂದಿ ಸೇರಿದ್ದಾರೆ ಮತ್ತು ಸ್ಫೋಟ ಮಧ್ಯಾಹ್ನ 1.30 ರಿಂದ 2ರ ನಡುವೆ ಸಂಭವಿಸಿರಬಹುದು ಮತ್ತು ಹಿರಿಯ ಅಧಿಕಾರಿಗಳು ಕಾರಣವನ್ನು ಖಚಿತಪಡಿಸಿಕೊಳ್ಳಲು ಸ್ಥಳಕ್ಕೆ ತಲುಪುತ್ತಿದ್ದಾರೆ ಎಂದಿದ್ದಾರೆ.
ನಮ್ಮ ಸಿಬ್ಬಂದಿ ತಲುಪುವ ವೇಳೆಗೆ ಯಾವುದೇ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಘಟನೆ ಸುಮಾರು 30 ಸೆಕೆಂಡುಗಳ ಅವಧಿಯಲ್ಲಿ ನಡೆದಿರುವಂತೆ ಕಂಡುಬಿಂದಿದೆ. ಎಲ್ ಪಿ ಜಿ ಸೋರಿಕೆಯಿಂದ ಘಟನೆ ನಡೆದಿರುವ ಶಂಕೆ ಇದೆ ಎಂದಿದ್ದಾರೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ರಾಘವೇಂದ್ರ, ಹ್ಯಾಂಡ್ವಾಶ್ ಪ್ರದೇಶದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಮತ್ತು ಅಲ್ಲಿ ಯಾವುದೇ ಎಲ್ ಪಿ ಜಿ ಸಿಲಿಂಡರ್ ಗಳು ಇರಲಿಲ್ಲ ಎನ್ನುವ ಮೂಲಕ ಘಟನೆಗೆ ತಿರುವು ಸಿಕ್ಕಿದೆ.
ಯಾರೋ ಅಪರಿಚಿತ ವ್ಯಕ್ತಿಗಳು ಅಲ್ಲಿ ಚೀಲವನ್ನು ಇಟ್ಟುಕೊಂಡು ಹೋಗಿದ್ದಾರೆ ಎಂದು ನನಗೆ ಮಾಹಿತಿ ಸಿಕ್ಕಿತು ಎಂದಿರುವ ಅವರು, ನಾವು ತನಿಖೆಗೆ ಪೊಲೀಸರ ಜೊತೆಗೆ ಸಹಕರಿಸುತ್ತಿದ್ದೇವೆ ಎಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ವೈಟ್ಫೀಲ್ಡ್ ಅಗ್ನಿಶಾಮಕ ಠಾಣೆ ಸಿಬ್ಬಂದಿ, ರಾಮೇಶ್ವರಂ ಕೆಫೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ ಎಂದು ನಮಗೆ ಕರೆ ಬಂದಿದೆ, ನಾವು ಸ್ಥಳಕ್ಕೆ ತಲುಪಿದ್ದೇವೆ ಮತ್ತು ಪರಿಸ್ಥಿತಿಯನ್ನು ವಿಶ್ಲೇಷಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.



