ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಆರೋಪದಡಿ ಬಂದನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಈಗ ಜನಪ್ರತಿನಿಧಿಗಳ ಕೋರ್ಟ್ ಕೂಡ ಸಾಕ್ಷಿನಾಶ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದೆ.
ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಶೀಘ್ರ ಬಿಡುಗಡೆ ಆಗುವ ಸಾಧ್ಯತೆಯಿದೆ. ಆದರೆ ಬಿಡುಗಡೆಯಾದರೂ ಅವರು ಧಾರವಾಡ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂಕೋರ್ಟ್ ಜಾಮೀನು ನೀಡುವ ಸಮಯದಲ್ಲಿ ಧಾರವಾಡ ಪ್ರವೇಕ್ಕೆ ನಿರ್ಬಂಧ ವಿಧಿಸಿದೆ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಚಂದ್ರಶೇಖರ ಇಂಡಿಗೂ ಜಾಮೀನು ಮಂಜೂರಾಗಿದೆ.
ಪ್ರಸ್ತುತ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಸೆರೆಮನೆಯಲ್ಲಿದ್ದಾರೆ. ನವೆಂಬರ್ 5ರಂದು 2019ರಂದು ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಕೋರ್ಟ್, ನವೆಂಬರ್ 6ರಂದು ಮತ್ತೆ ಮೂರು ದಿನಗಳಿಗೆ ಬಂಧನದ ಅವಧಿ ವಿಸ್ತರಿಸಿತ್ತು. ನವೆಂಬರ್ 9ರಂದು ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳಿಗೆ ವಿಸ್ತರಿಸಲಾಯಿತು. ನಂತರ ಒಂಬತ್ತು ತಿಂಗಳಿನಿಂದ ವಿನಯ್ ಕುಲಕರ್ಣಿ ಸೆರೆವಾಸದಲ್ಲಿದ್ದಾರೆ.




