ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ

3 years ago

#Strict #action #against #fakenews #spreaders #factcheck

ಬೆಂಗಳೂರು: ಸುಳ್ಳು ಸುದ್ದಿ  ಹರಡಿಸಿ ವಿವಾದ ಸೃಷ್ಠಿಸುವುದು, ಶಾಂತಿ‌ ಸುವ್ಯವಸ್ಥತೆ ಭಂಗ ತರುವುದು, ಗಲಭೆಗೆ ಕಾರಣವಾಗುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿ ಸುಳ್ಳು ಸುದ್ದಿಗಳನ್ನು ವಿನಿಮಯ ಮಾಡಿ ಸಮಸ್ಯೆ ಉಂಟು ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಸದ್ದಿಲ್ಲದೇ ಪೊಲೀಸ್ ಪಡೆ ಕಾರ್ಯಾಚರಣೆ ಕೈಗೊಳ್ಳಲಿದೆ.

ಬೆಂಗಳೂರು ನಗರದಲ್ಲಿ ಸೈಬರ್ ಕ್ರೈಂ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಸುಳ್ಳು ಸುದ್ದಿಯಿಂದ ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ನಡೆದಿದ್ದು ಇದಕ್ಕೆ ಸಾಮಾಜಿಕ ಜಾಲತಾಣದ ನಂಟಿತ್ತು. ಹೀಗಾಗಿ ನಗರದಲ್ಲಿ ಎದುರಾಗುತ್ತಿರುವ ಸುಳ್ಳು ಸುದ್ದಿಗಳ ಹಾವಳಿಯನ್ನು ಕಡಿಮೆ ಮಾಡಲು ಪಡೆಯಿಂದ ಹೊಸ ತಂಡ ಕಾರ್ಯ ನಿರ್ವಹಿಸಲು ಸಿದ್ಧವಾಗುತ್ತಿದೆ.

ನಗರದ ಪ್ರತಿ ಠಾಣೆಯಲ್ಲೂ ಸೋಷಿಯಲ್ ಮೀಡಿಯಾ ವಿಂಗ್ ರಚನೆಯಾಗಲಿದ್ದು ವಿಂಗ್ ನಲ್ಲಿ ಇಬ್ಬರು ಸಿಬ್ಬಂದಿಯಂತೆ ನಗರದಾದ್ಯಂತ ಎಲ್ಲಾ ಠಾಣೆಗೂ ಪೊಲೀಸರ ನೇಮಕ ಮಾಡಲಾಗುತ್ತಿದೆ. ಆಯಾ ಏರಿಯಾದಲ್ಲಿ ನಡೆಯುವ ಸಾಮಾಜಿಕ ಜಾಲತಾಣದ ಪ್ರತಿ ಕಾರ್ಯಚಟುವಟಿಕೆಗಳ ಬಗ್ಗೆ ವಿಂಗ್ ಪೊಲೀಸರು ಮಾಹಿತಿ ಕಲೆ ಹಾಕಿ ನಿಗಾ ಇಡಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವುದು, ಷೇರ್ ಮಾಡುವುದು ಅಥವಾ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಕಠಿಣ ಕ್ರಮ: ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ತಜ್ಞರ ನೇಮಕ ಮಾಡಲಾಗಿದೆ. ತಾಂತ್ರಿಕ ಪರಿಣಿತಿ ಇರುವಂತವರನ್ನ ನೇಮಕ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಬ್ಬರು ಸಿಬ್ಬಂದಿ ಗುರುತಿಸಿ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಲು ಸೂಚಿಸಲಾಗಿದೆ.

ಸಾಮಾಜಿಕ ಜಾಲತಾಣ ನಿಗಾ ವಹಿಸಲು ಇಬ್ಬರು ಸಿಬ್ಬಂದಿ ನೇಮಕ ಮಾಡಲಾಗಿದ್ದು, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಎಲ್ಲಾ ಠಾಣೆಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರು, ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಶೇಷ ತಂಡ ರಚನೆ: ಸಾರ್ವಜನಿಕರಿಗೆ ಬೇರೆ ಬೇರೆ ರೀತಿಯಲ್ಲಿ ಉದ್ರೇಕಕಾರಿ ಆಗುವಂತಹ ಪೋಸ್ಟ್ ಮಾಡಲಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವುದು ಗೊತ್ತಾಗಿದೆ. ಹಾಗಾಗಿ ಡಿಸಿಪಿ ಕಚೇರಿಯಲ್ಲಿ ನಿಗಾ ವಹಿಸಲು ವಿಶೇಷ ತಂಡ ರಚನೆ ಮಾಡಿದ್ದೇವೆ. ಪೊಲೀಸ್ ಕಮೀಷನರ್ ಕಚೇರಿಯಲ್ಲೂ ಪರಿಣಿತರ ದೊಡ್ಡ ತಂಡವನ್ನ ರಚನೆ ಮಾಡಲಾಗಿದೆ. ನಿಜಾಂಶವನ್ನ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇವೆ ಈಗಾಗಲೇ ಸಿಬ್ಬಂದಿಗೆ ಈ ಸಂಬಂಧಿಸಿದಂತೆ ವಿಶೇಷವಾದ ತರಬೇತಿ ನೀಡಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply