ರಾಷ್ಟ್ರಕವಿ ಗೋವಿಂದ ಪೈ ನಿವಾಸದಲ್ಲಿ ಬಹುಮುಖೀ ಸಾಧಕ ಡಿ. ಕೆ ಚೌಟರ ಮಧುರ ಮೆಲುಕು

5 years ago

ಮಂಜೇಶ್ವರ: ಮಂಜೇಶ್ವರ ತಾಲೂಕು ಅನನ್ಯ ಪ್ರತಿಭೆಗಳ ತವರು. ಅವರು ಈ ನೆಲಕ್ಕೆ ನೀಡಿದ ಕೊಡುಗೆ ಅನನ್ಯ. ಆದರೆ ಅವರ ಕೊಡುಗೆ ದಾಖಲಿಸಿ, ಸ್ಮರಿಸುವ ಮತ್ತು ಕೈ ದಾಟಿಸುವ ಪ್ರಕ್ರಿಯೆ ನಡೆಯದಿರುವುದು ದುರಂತ ಎಂದು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ. ಆರ್. ಜಯಾನಂದ ಹೇಳಿದರು.

ಜಮೀನ್ದಾರೀ ಕುಟುಂಬ ಹಿನ್ನೆಲೆಯಿಂದ ಬಂದರೂ ಬದುಕನ್ನು ನೊಂದವರ, ಶೋಷಿತರ ದನಿಯನ್ನಾಗಿಸಿದ ಕಲಾಪ್ರೇಮಿ, ರಂಗಕರ್ಮಿ, ಸಾಹಿತಿ, ಸಾಂಸ್ಕೃತಿಕ ರಾಯಭಾರಿ ಡಾ. ಡಿ.ಕೆ.ಚೌಟರ 2ನೇ ವರ್ಷದ “ನೆನಪು” ಕಾರ್ಯಕ್ರಮ ಮಂಜೇಶ್ವರದ ಗೋವಿಂದ ಪೈ ನಿವಾಸ ‘ಗಿಳಿವಿಂಡು ‘ನಲ್ಲಿ (ಜೂ. 18ರಂದು) ನಡೆಯಿತು.

ಡಿ. ಕೆ ಚೌಟರ ನೆನಪಿನ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಡಿ.ಕೆ.ಚೌಟರಂತಹ ಮೇಧಾವಿಗಳ ಕೊಡುಗೆ ಅತ್ಯಪಾರ. ಗೋವಿಂದ ಪೈ ಸಮಿತಿಗೆ ಅವರು ಬೆನ್ನೆಲುಬಾಗಿದ್ದರೆಂದು ಸ್ಮರಿಸಿದರು.

ಹಿರಿಯ ಪತ್ರಕರ್ತ, ಕಣಿಪುರ ಮಾಸಿಕದ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಡಾ. ಡಿಕೆ ಚೌಟರನ್ನು ನೆನಪಿಸಿದರು. ಚೌಟರೊಳಗೆ ಸದಭಿರುಚಿಗಳ ದೃಷ್ಟಿಕೋನವಿತ್ತು. ಅದರಿಂದಾಗಿಯೇ ಮಂಜೇಶ್ವರದ ಕವಿ ನಿವಾಸ ಅಲಂಕೃತ ಸ್ಮಾರಕವಾಯಿತು ಎಂದಲ್ಲದೇ 2 ದಶಕಗಳ ಕಲಾ, ಸಾಹಿತ್ಯ ಪಯಣ ಮೆಲುಕಿದರು.

ಕೇರಳ ತುಳು ಅಕಾಡೆಮಿ ಅಧ್ಯಕ್ಷ, ಹಿರಿಯ ರಂಗಕರ್ಮಿ ಎಂ. ಉಮೇಶ ಸಾಲಿಯಾನ್ ಅಧ್ಯಕ್ಷತೆ ವಹಿಸಿದರು. ಚೌಟರ ನೆನಪನ್ನು ಮೆಲುಕು ಹಾಕಿದ ಅವರು ಚೌಟರು ಎಲ್ಲಿದ್ದರೂ ಹುಟ್ಟೂರಿನ ಮಣ್ಣಿನ ಸಂಸ್ಕೃತಿಯ ಬಗೆಗೆ ಕಾಳಜಿಯಿಂದ ಕಣ್ಣರಳಿಸಿ, ಪ್ರೋತ್ಸಾಹ ನೀಡುತ್ತಿದ್ದರು. ಅವರನ್ನು ಈ ನೆಲ ಮರೆಯಕೂಡದೆಂದು ಒಡನಾಟವನ್ನು ಸ್ಮರಿಸಿಕೊಂಡರು.

ಕೇರಳ ತುಳು ಅಕಾಡೆಮಿ ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದಿನೇಶ್ ಕೊಡಂಗೆ,  ಬಿ.ಎಂ.ರಾಮಯ್ಯ ಶೆಟ್ಟಿ ಲೈಬ್ರರಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ನಿವೃತ್ತ ವಿಜ್ಞಾನಿ ವಾಸುದೇವ ಕಣ್ವತೀರ್ಥ, ಸಾಮಾಜಿಕ ಮುಂದಾಳು ಮೊಯ್ದೀನಬ್ಬ,  ಉದ್ಯಾವರ ಮಾಡ ದೈವಸ್ಥಾನದ ಟ್ರಸ್ಟಿ ಬಿ.ಎನ್.ಕರುಣಾಕರ ಶೆಟ್ಟಿ ಮಾತನಾಡಿದರು.

ಲೈಬ್ರರಿಕೌನ್ಸಿಲ್ ಸದಸ್ಯ, ನಿವೃತ್ತ ಅಧ್ಯಾಪಕ ಜಯಂತ ಮಾಸ್ತರ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿರುವ ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು, ಧನ್ಯವಾದಗಳು ಉಮೇಶ್ ಸಾಲಿಯಾನ. ತೊ.ನಂಜುಂಡ ಸ್ವಾಮಿ ಅವರು ಮಾಡುತಿದ್ದ ಕಾರ್ಯಕ್ರಮವನ್ನು ತಾವು ಅವರ ಅನುಪಸ್ಥಿತಿಯಲ್ಲಿ ನಡೆಸಿಕೊಟ್ಟಿರುತ್ತೀರಿ. ಕನ್ನಡ ನಾಡಿನ ರಂಗಭೂಮಿಯ ಮತ್ತು ಸಾಂಸ್ಕೃತಿಕ ಜನಗಳಿಗೆ ಡಾ.ಚೌಟರ ನೆನಪನ್ನು ಹಸಿರಾಗಿಸಿದ್ದೀರಿ. ತೊ.ನಂಜುಂಡಸ್ವಾಮಿ ಅವರ ರಂಗ ಚೇತನ ಸಾಂಸ್ಕೃತಿಕ ಟ್ರಸ್ಟ್ ಪರವಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

Leave a Reply