ಶಿಕ್ಷಣಕ್ಕೆ ಬೇಕಾದ ಪುಸ್ತಕ ನೀಡಿದಾಗ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ: ಸುತ್ತೂರು ಶ್ರೀ
ಬೆಂಗಳೂರು: ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 11ನೇ ವರ್ಷದ 10 ಸಾವಿರ ಮಕ್ಕಳಿಗೆ 1.5 ಲಕ್ಷ ಉಚಿತ ನೋಟ್ ಪುಸ್ತಕಗಳು ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಸುತ್ತೂರು ಮಠ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯನಿರ್ವಾಹಕ ತಿಪ್ಪೇಸ್ವಾಮಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶಾಸಕರುಗಳಾದ ಬಿ.ವೈ.ವಿಜಯೇಂದ್ರರವರು, ಸತೀಶ್ ರೆಡ್ಡಿ ಮತ್ತು ರಕ್ಷಾ ಫೌಂಡೇಷನ್ ಸಂಸ್ಥಾಪ, ಶಾಸಕ ಸಿ.ಕೆ.ರಾಮಮೂರ್ತಿ, ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಸೋಮಶೇಖರ್, ನಾಗರತ್ನ ರಾಮಮೂರ್ತಿ, ಗೋವಿಂದನಾಯ್ಡು, ಚಂದ್ರಶೇಖರ್ ರಾಜು, ಮಂಜುನಾಥ್ ರೆಡ್ಡಿ ನೆರವೇರಿಸಿದರು. ನೋಟ್ ಪುಸ್ತಕ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.
ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಣಕ್ಕೆ ಬೇಕಾದ ಪುಸ್ತಕ ನೀಡಿದಾಗ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಅವಶ್ಯಕತೆ ಇರುವ ಮಕ್ಕಳನ್ನು ಗುರುತಿಸಿ ಪುಸ್ತಕ, ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಸಮಾಜಕ್ಕೆ ಮಾದರಿಯಾಗಬೇಕು. ಪ್ರತಿಯೊಬ್ಬ ಮಕ್ಕಳಿಗೆ ಜ್ಞಾನರ್ಜನೆ ಮುಖ್ಯ, ಜ್ಞಾನ ಪಡೆಯಬೇಕಾದರೆ ಶಿಕ್ಷಣ ಮುಖ್ಯ. ದೇಶ, ಭಾಷೆ ಮತ್ತು ನಮ್ಮ ಸಂಸ್ಕೃತಿ, ಸಂಪ್ರಾದಯ ಮರೆಯಬಾರದು ಹಾಗೂ ರಾಷ್ಟ್ರಭಕ್ತಿ, ದೇಶಪ್ರೇಮ ಎಲ್ಲ ಮಕ್ಕಳು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ತೇಜಸ್ವಿ ಸೂರ್ಯ ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ, ಸಹಕಾರ ನೀಡುವುದು ಮುಖ್ಯ ಈ ನಿಟ್ಟಿನಲ್ಲಿ ರಕ್ಷಾ ಫೌಂಡೇಷನ್ ದಿಟ್ಟ ಹೆಜ್ಜೆ ಇಟ್ಟಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಿಕ್ಷಣ, ಗುರುಗಳ ಸರಿಯಾದ ಮಾರ್ಗದರ್ಶನ ಲಭಿಸಿದರೆ ಉತ್ತಮ ಪ್ರಜೆಗಳಾಗಿ ಬೆಳಗುತ್ತಾರೆ ಎಂದು ಹೇಳಿದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ನಾವು ಜೀವನ ಸಾಗಿಸುವುದು ಸಾಮಾನ್ಯ ವಿಷಯ, ಆದರೆ ಸಮಾಜದಲ್ಲಿ ನೊಂದವರ ಮತ್ತು ಬಡವರ ಸೇವೆ ಮಾಡುವುದು ಮುಖ್ಯ. ದೇಶದ ಭವಿಷ್ಯ ನಿಂತಿರುವುದು ಮಕ್ಕಳ, ಅವರ ಭವಿಷ್ಯ ಉಜ್ವಲವಾಗಿರಲಿ ಎಂಬ ಶುಭ ಹಾರೈಕೆ ಎಂದು ಹೇಳಿದರು.
ಡಾ.ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಬೇಕು ಮತ್ತು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಸೂತ್ರಗಳು. ಇಂದು ತಂತ್ರಜ್ಞಾನ ಮುಂದುವರಿದಿದೆ ಕಂಪ್ಯೂಟರ್ ಲ್ಯಾಪ್ ಟಾಪ್ ಯುಗವಾಗಿದೆ. ಮಕ್ಕಳು ಪೆನ್ನು ಬಳಸಿ ಬರೆದರೆ ಮಿದುಳಿಗೆ ಒಳ್ಳೆಯದು. ಇದುವರಗೆ ಜಯದೇವ ಆಸ್ಪತ್ರೆಯಲ್ಲಿ 52 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಮಾನವೀಯತೆ ಮುಖ್ಯ ಎಂದು ಹೇಳಿದರು .
ರಕ್ಷ ಫೌಂಡೇಷನ್ ಸಂಸ್ಥಾಪಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಶಿಕ್ಷಣ ಸೌಲಭ್ಯ ಬಡ ಮಕ್ಕಳಿಗೆ ಸಿಗಬೇಕು ಎಂದು ರಕ್ಷಾ ಫೌಂಡೇಷನ್ ಕಳೆದ 11 ವರ್ಷಗಳಿಂದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ರಕ್ಷಾ ಫೌಂಡೇಷನ್ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸೇವೆ ಮಾಡುತ್ತಿದೆ .ಉಚಿತ ಕಂಪ್ಯೂಟರ್ ತರಭೇತಿ ಮತ್ತು ಉತ್ತಮ ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಪ್ರತಿ ವರ್ಷ ನೀಡುತ್ತಾ ಬಂದಿದೆ ಎಂದು ಹೇಳಿದರು.
ಜಯದೇವ ಆಸ್ಪತ್ರೆಗೆ 2 ಲಕ್ಷ ರೂಪಾಯಿ ಮತ್ತು ಅಂತಾರಾಷ್ಟ್ರೀಯ ಅಂಧರ ಮಹಿಳಾ ತಂಡದ ರಾಜ್ಯದ ಪ್ರತಿನಿಧಿಸುತ್ತಿರುವ ಗಂಗವ್ವ, ಮತ್ತು ಜ್ಯೋತಿರವರಿಗೆ ಸನ್ಮಾನಿಸಲಾಯಿತು.



