ಬಿಜೆಪಿ ಸೇರಲು 100 ಕೋಟಿ ರೂ. ಆಫರ್ ಆರೋಪ: ಗಣಿಗ ರವಿ ವಿರುದ್ಧ ಬಿಜೆಪಿ ದೂರು

2 years ago

ಬೆಂಗಳೂರು: ರಾಜ್ಯದ ಚುನಾಯಿತ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಬಿಜೆಪಿ ಸಂಚು ರೂಪಿಸಿದೆ. ನಾಯಕರೊಬ್ಬರು ದೂರವಾಣಿ ಮೂಲಕ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಬಿಜೆಪಿ ಸೇರಲು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಮಂಡ್ಯ ಶಾಸಕ ಗಣಿಗ ರವಿ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.

ಈ ರೀತಿ ಸುಳ್ಳು ಆರೋಪ ಮಾಡುವ ಮೂಲಕ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕತ್ವ ಇದೀಗ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

ವರಿಷ್ಠರ ಸೂಚನೆ ಮೇರೆಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹುಬ್ಬಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ  ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ನಿಯೋಗವೊಂದು‌ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಶಾಸಕ ರವಿಕುಮಾರ್ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಬೇಕು. ಒಂದು ವೇಳೆ ಶಾಸಕರು ಸುಳ್ಳು ಮಾಹಿತಿ ನೀಡಿರುವುದು ಪತ್ತೆಯಾದರೆ ಅವರ ವಿರುದ್ಧ ಜರುಗಿಸಬೇಕೆಂದು ಆಗ್ರಹಿಸಿ ದೂರು ನೀಡಿದೆ.

ಶಾಸಕ ರವಿಕುಮಾರ್ ಅವರನ್ನು ಯಾರು? ಎಲ್ಲಿ? ಯಾವಾಗ? ಭೇಟಿ ಮಾಡಿದರು. ಅವರಿಗೆ 100 ಕೋಟಿ ರೂ. ಆಫರ್ ನೀಡಿರುವುದಕ್ಕೆ ದಾಖಲೆಯಿದೆಯೇ? ಇದ್ದರೆ ಅದನ್ನು ಏಕೆ ಬಿಡುಗಡೆ ಮಾಡಬಾರದು? ಸುಳ್ಳು ಆರೋಪ ಮಾಡಿರುವ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಹಿಂದೆಯೂ ಇದೇ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಾ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ಅವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ ಬಂಧಿಸಬೇಕು. ಈ ಹೇಳಿಕೆಯಿಂದ ಬಿಜೆಪಿಗೆ ಸಾಕಷ್ಟು ಮುಜುಗರವಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

Leave a Reply