ಹಾಸನ: ಗಣೇಶ ವಿಸರ್ಜನೆಯ ಮೆರವಣಿಗೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
- ಕನ್ನಡ, ಕನ್ನಡಿಗರ ಪರ ದುಂಡುಮೇಜಿನ ಸಭೆ
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
ಮೃತದ ಕುಟುಂಬಗಳಿಗೆ ಭೇಟಿ ನೀಡಿ ಹಾಗೂ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯ ವೇಳೆ ನಡೆದ ಅಪಘಾತದಿಂದ 9 ಜನರು ಮೃತಪಟ್ಟಿರುವುದು ದೊಡ್ಡ ದುರಂತ. ಈ ಘಟನೆಯಿಂದಾಗಿ ಇಡೀ ರಾಜ್ಯ ಜನರು ದುಃಖಕ್ಕೊಳಗಾಗಿದ್ದಾರೆ. ಲಾರಿಯ ಚಾಲಕ ಏಕೆ ಹೀಗೆ ಚಾಲನೆ ಮಾಡಿದ ಎಂದು ತಿಳಿದುಬರಬೇಕಿದೆ. ಮೃತಪಟ್ಟವರ ಕುಟುಂಬಗಳು ಅನಾಥವಾಗಿವೆ. ಮೃತರಾದವರಿಗೆ ದೇವರು ಚಿರಶಾಂತಿ ನೀಡಲಿ ಎಂದರು.
ಈ ಘಟನೆಯಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕೇರಳಕ್ಕೂ ಕೆಲವು ದುರ್ಘಟನೆಯ ವೇಳೆ ಪರಿಹಾರ ನೀಡಿದೆ. ಆದ್ದರಿಂದ ತಲಾ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಿದರೆ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಗಾಯಾಳುಗಳನ್ನು ಕೂಡ ಭೇಟಿಯಾಗಿ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಬಗ್ಗೆ ಖಚಿತ ಮಾಡಿಕೊಳ್ಳುತ್ತೇನೆ ಎಂದರು.
ಈ ಘಟನೆಯ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಎಚ್ಚರ ವಹಿಸಬೇಕಿತ್ತು. ಇನ್ನು ಮುಂದಾದರೂ ಪೊಲೀಸರು ಗಣೇಶ ಮೆರವಣಿಗೆ ವೇಳೆ ಟ್ರಾಫಿಕ್ ಬಗ್ಗೆ ಕ್ರಮ ವಹಿಸಬೇಕು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಈ ಭಾಗದ ರಸ್ತೆಯಲ್ಲಿ ಹಂಪ್ಗಳನ್ನು ಹಾಕುವ ಬಗ್ಗೆ ಚರ್ಚಿಸುತ್ತೇನೆ. ಪ್ರತಿ ಹಬ್ಬ ಆಚರಣೆಯಲ್ಲಿ ಪೊಲೀಸ್ ಬಂದೋಬಸ್ತ್ ಇರಬೇಕಾಗುತ್ತದೆ. ಸರ್ಕಾರ ಸರಿಯಾದ ಸುತ್ತೋಲೆ ನೀಡಬೇಕು ಎಂದರು.
ಮಾನವೀಯತೆ ದೃಷ್ಟಿಯಿಂದ ಹೆಚ್ಚು ಪರಿಹಾರ ನೀಡಬೇಕಾಗುತ್ತದೆ. ಬಡವರೇ ಇರುವುದರಿಂದ ಅಂಥವರಿಗೆ ಹೆಚ್ಚು ಪರಿಹಾರ ನೀಡುವುದು ಉತ್ತಮ. ಈ ದುರಂತದಲ್ಲಿ ಮಡಿದವರೆಲ್ಲರೂ ಯುವಕರೇ ಆಗಿದ್ದಾರೆ ಹಾಗೂ ಬಡವರಾಗಿದ್ದಾರೆ. ಎರಡು ಮನೆಗೆ ಹೋದಾಗ, ಆ ಕುಟುಂಬಕ್ಕೆ ಒಬ್ಬನೇ ಮಗ ಇರುವುದು ತಿಳಿಯಿತು. ಹಾಗೆಯೇ ಗಾಯಾಳುಗಳನ್ನು ಮಾತಾಡಿಸಿದಾಗ ಪರೀಕ್ಷೆ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಗಮನ ಕೊಡಬೇಕು. ಕೆಲವು ಕುಟುಂಬದವರು ಪರಿಹಾರ ಕಡಿಮೆ ಕೊಟ್ಟಿರುವುದರ ಬಗ್ಗೆ ಹೇಳಿದರು ಎಂದರು.
ಇದು ಡಿಜೆಯ ಸಂಗತಿ ಅಲ್ಲ. ಲಾರಿ ಚಾಲಕನ ಅಚಾತುರ್ಯದಿಂದ ಈ ಅನಾಹುತ ನಡೆದಿದೆ. ಕೆಲವು ಮೆರವಣಿಗೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿರುತ್ತಾರೆ. ಜನಸಂಖ್ಯೆಯ ಆಧಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ವಹಿಸಬೇಕು. ಇಲ್ಲಿ ಡಿಜೆ, ಡೋಲು ಮೊದಲಾದವುಗಳಿಗೆ ಸಂಬಂಧವಿಲ್ಲ ಎಂದರು.



