ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ: ಕಿವಿ ಮೇಲೆ ಹೂವಿಟ್ಟ ಬಿಜೆಪಿ ಹೊಸ ಸುಳ್ಳುಗಳೊಂದಿಗೆ ಬಂದಿದೆ ಎಂದ ಕಾಂಗ್ರೆಸ್

3 years ago

BJP released manifesto: Congress said that BJP has come up with new lies

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ಆರೋಪಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆ ಮೂಲಕ ತಿಳಿಸಿದೆ. ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಬಿಡುಗಡೆ ಮಾಡಿದರು.

ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು, 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಸಿರಿಧಾನ್ಯ, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಮೂರು ಎಲ್‍ಪಿಜಿ ಸಿಲಿಂಡರ್, ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಹಲವಾರು ಭರವಸೆಗಳು ಪ್ರಣಾಳಿಕೆಯಲ್ಲಿವೆ.

ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಮಾಹಿತಿ ನೀಡಿದ ಜೆ.ಪಿ.ನಡ್ಡಾ, ಮಹಾನಗರ ಪಾಲಿಕೆಯ ವಾರ್ಡ್‍ಗಳಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟ ಮತ್ತು ಆರೋಗ್ಯಕರ ಆಹಾರ ಒದಗಿಸಲು ಅಟಲ್ ಆಹಾರ ಕೇಂದ್ರ ಸ್ಥಾಪನೆ. ಮಾಡಲಾಗುವುದು ಎಂದು ತಿಳಿಸಿದರು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಪ್ರಸ್ತಾಪ ಮಾಡಲಾಗಿದ್ದು, ಬಹುಮುಖ್ಯವಾಗಿ ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಹೊಸ ಯೋಜನೆಯನ್ನು ತರುವುದಾಗಿ ಹೇಳಿದರು.

ಸರ್ವರಿಗೂ ಸೂರು ಅನ್ವಯ 10 ಲಕ್ಷ ನಿವೇಶನಗಳು ಹಾಗೂ ಬಹುಮಹಡಿ ವಸತಿ ಯೋಜನೆಯಡಿ 5 ಲಕ್ಷ ಮನೆ ನಿರ್ಮಿಸಿ ವಿತರಿಸುವುದು ಸೇರಿದಂತೆ ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಗಮ ಸ್ಥಾಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ 10 ಸಾವಿರ ರೂ. ಠೇವಣಿ ಇಡಲಾಗುವುದು. ಹೊಸ ಕೃಷಿ ಆಧಾರಿತ ಕೈಗಾರಿಕೆ ಕ್ಲಸ್ಟರ್ ಗಳು ಮತ್ತು ಆಹಾರ ಕ್ಲಸ್ಟರ್ ಗಳ ಸ್ಥಾಪನೆ, ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ, ಐಎಎಸ್, ಕೆಎಎಸ್ ಸೇರಿ ವಿವಿಧ ಉದ್ಯೋಗಕಾಂಕ್ಷಿಗಳ ತರಬೇತಿ ಪಡೆಯಲು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅತ್ಯಾಧುನಿಕ ಮೂಲ ಸೌಲಭ್ಯಗಳನ್ನು ಒದಗಿಸಿ ರಾಜ್ಯಾದ್ಯಂತ ಪ್ರವಾಸಿ ತಾಣಗಳನ್ನು ರೂಪಿಸಲಾಗುವುದು, ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಕಾವೇರಿ ಸರ್ಕ್ಯೂಟ್, ಗಾಣಗಾಪುರ ಕಾರಿಡಾರ್ ಅಭಿವೃದ್ಧಿಪಡಿಸಲು 1500 ವಿನಿಯೋಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮನ್ವಯ ಯೋಜನೆಯಡಿ ತ್ವರಿಗತಿಯಲ್ಲಿ ಎಸ್‍ಎಂಇ ಮತ್ತು ಐಟಿಐಗಳ ನಡುವೆ ಸಮನ್ವಯ ಸಾಧಿಸಿ ಪ್ರತಿಭಾನ್ವಿತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ತೊಡಗಲು ಸಹಾಯ, ಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ದಿಪಡಿಸಲು ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಿ ಈ ಮೂಲಕ ಬೆಂಗಳೂರನ್ನು ಡಿಜಿಟಲ್ ಇನೋವೇಷನ್ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ನಿರ್ಮಾಣ ಮಾಡಲಾಗುವುದು. ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಬೆಂಗಳೂರಿನ ಹೊರಗೆ ಲಾಜಿಸ್ಟಿಕ್ ಕೈಗಾರಿಕಾ ಕ್ಲಸ್ಟರ್ ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಜಾರಿಗೆ ತರಲು ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ವಿತರಿಸುವುದು ಸೇರಿದಂತೆ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಆರೋಗ್ಯ ಕ್ಷೇತ್ರದತ್ತ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ಕರ್ನಾಟಕ ರೂಪುಗೊಳ್ಳಲು ಹಾಲಿ ಇರುವ ಬಿಎಂಟಿಸಿ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್‍ಗಳಾಗಿ ಪರಿವರ್ತಿಸುವುದು, ಬೆಂಗಳೂರು ಹೊರವಲಯದಲ್ಲಿ ಇವಿ ಸಿಟಿ ಅಭಿವೃದ್ಧಿಪಡಿಸಿ ಚಾರ್ಜಿಂಗ್ ಸ್ಟೇಷನ್‍ಗಳ ನಿರ್ಮಾಣ, ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಕಿರುಶಿಥೀಲಿಕರಣ ಸೌಲಭ್ಯ ಕೇಂದ್ರ ಹಾಗೂ ಕೃಷಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು 30 ಸಾವಿರ ಕೋಟಿ ಮೊತ್ತದ ಕೆ-ಅಗ್ರಿಫಂಡ್ ಸ್ಥಾಪಿಸಲಾಗುವುದು ಎಂದು ವಿವರಿಸಿದರು.

ಕನ್ನಡ ಚಿತ್ರೋದ್ಯಮಕ್ಕೆ ಉದ್ಯಮ ಸ್ಥಾನಮಾನ ನೀಡಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ದೇಶದ ಅತಿದೊಡ್ಡ ಪುನೀತ್ ರಾಜ್‍ಕುಮಾರ್ ಫಿಲಂ ಸಿಟಿ ಸ್ಥಾಪನೆ, ವಿಧವೆಯರ ಮಾಸಿಕ ಪಿಂಚಣಿ 800 ರೂ.ನಿಂದ 2 ಸಾವಿರಕ್ಕೆ ಹೆಚ್ಚಳ, ಬೆಂಗಳೂರಿನ ಅಪಾರ್ಟ್‍ಮೆಂಟ್‍ಗಳಲ್ಲಿ ಸುಲಲಿತ ಜೀವನಕ್ಕೆ ಕರ್ನಾಟಕ ಅಪಾರ್ಟ್‍ಮೆಂಟ್ ಮಾಲೀಕತ್ವ ಕಾಯ್ದೆಗೆ ತಿದ್ದುಪಡಿ ತಂದು ಸಮಸ್ಯೆ ಪರಿಹಾರಕ್ಕೆ ಕ್ರಮ, ಆನ್‍ಲೈನ್ ವ್ಯವಸ್ಥೆ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಸತ್ತವರ ಜಾತಕ: ಈ ನಡುವೆ ಬಿಜೆಪಿ ಪ್ರಣಾಳಿಕೆಯ ಬಗ್ಗೆ ತೀಕ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಚುನಾವಣೆ ಗೆಲ್ಲಲು ಬಿಜೆಪಿ ಹೊರತಂದಿರುವ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ ಎಂದು ವ್ಯಂಗ್ಯವಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ಬಿಜೆಪಿ ತನ್ನ ಹಿಂದಿನ ಪ್ರಣಾಳಿಕೆಯನ್ನ ಒಮ್ಮೆ ಜನರ ಮುಂದಿಟ್ಟು ಎಷ್ಟು ಭರವಸೆಗಳನ್ನು ಪೂರೈಸಿದೆ ಎಂಬ ಲೆಕ್ಕ ಕೊಡಲಿ. ನಂತರ ಹೊಸ ಪ್ರಣಾಳಿಕೆಯ ಬಗ್ಗೆ ಮಾತಾಡಲಿ. ಇದು ಬಿಜೆಪಿಗೆ ಸಾಧ್ಯವೇ ಎಂದು ಪ್ರಶ್ನಿಸಿದೆ.

‘ಬಿಜೆಪಿಯ ಪ್ರಣಾಳಿಕೆ ಎಂದರೆ ಸುಳ್ಳಿನ ಕಂತೆ ಎಂಬುದು ಈಗಾಗಲೇ ಸಾಬೀತಾಗಿದೆ, ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ. ಕಳೆದ ಬಾರಿ ಅನ್ನಪೂರ್ಣ ಕ್ಯಾಂಟೀನ್ ತೆರೆಯುತ್ತೇವೆ ಎಂದಿದ್ದರು. ಆದರೆ ಇದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದರು. ಈಗ ಅನ್ನಪೂರ್ಣ ಹೋಗಿ ಅಟಲ್ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಿದ್ದಾರೆ. ಮುಂದಿನ ಪ್ರಣಾಳಿಕೆಯಲ್ಲಿ ಮೋದಿ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಾರೆ. ಇದು ಹೀಗೆಯೇ ಮುಂದುವರೆಯುತ್ತದೆ ಸುಳ್ಳುಗಳ ಸರಮಾಲೆ‘ ಎಂದು ಕುಹಕವಾಡಿದೆ.

ಸಾಲ ಮನ್ನಾ ಮಾಡುತ್ತೇವೆ, ಬೆಂಬಲ ಬೆಲೆ ನೀಡುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಭರಪೂರ ಭರವಸೆ ನೀಡಿ ಮಣ್ಣಿನ ಮಕ್ಕಳ ಕಿವಿ ಮೇಲೆ ಹೂವಿಟ್ಟ ಬಿಜೆಪಿ ಈಗ ಹೊಸ ಸುಳ್ಳುಗಳೊಂದಿಗೆ ಬಂದಿದೆ. ರೈತರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದವರನ್ನು ಒಡ್ಡೋಡಿಸಲು ಜನ ತೀರ್ಮಾನಿಸಿದ್ದಾರೆ‘ ಎಂದು ಹೇಳಿದೆ.

Leave a Reply