ನನ್ನ ಹತ್ಯೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ: ರಾಜೇಂದ್ರ

1 year ago

ಬೆಂಗಳೂರು: ಹನಿಟ್ರ್ಯಾಪ್ ಆರೋಪದ ಮೂಲಕ ದೇಶಾದ್ಯಂತ ಸುದ್ದಿ ಮಾಡಿರುವ ವಿಧಾನಪರಿಷತ್ ಸದಸ್ಯ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ತಮ್ಮ ಹತ್ಯೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂದು ದೂರು ನೀಡಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಸೂಚನೆಯ ಮೇರೆಗೆ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಆಡಿಯೋ ಸಾಕ್ಷ್ಯದ ಸಹಿತ ಎರಡು ಪುಟಗಳ ದೂರು ನೀಡಿದ್ದಾರೆ.

ತುಮಕೂರಿನ ಕ್ಯಾತ್ಸಂದ್ರಲ್ಲಿರುವ ತಮ್ಮ ರಜತಾದ್ರಿ ನಿವಾಸದಲ್ಲಿ ಕಳೆದ ನವೆಂಬರ್‌ನಲ್ಲಿ ನನ್ನ ಮಗಳ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ತಯಾರಿ ಮಾಡುತ್ತಿದ್ದೆ. ಈ ವೇಳೆ ನನ್ನ ಹತ್ಯೆಗೆ ಯತ್ನ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಯಾವ ಕಾರಣಗಳಿಂದ ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆಯೋ ನನಗೆ ಗೊತ್ತಿಲ್ಲ. ಆದರೆ ನನ್ನ ಹತ್ಯೆಗೆ ಸಂಚು ನಡೆದಿರುವ ಕುರಿತಂತೆ ನನ್ನ ಆಪ್ತರು ಮಾಹಿತಿ ನೀಡಿದ್ದಾರೆ. ಆನಂತರ ನಾನು ಪರಿಶೀಲಿಸಿದಾಗ ಅದು ನಿಜವೆಂದು ತಿಳಿದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನನ್ನ ಹತ್ಯೆಗೆ ಸುಪಾರಿ ಪಡೆದಿರುವ ಹಂತಕರು ನನ್ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ನನ್ನ ಕಾರಿಗೆ ಜಿಪಿಎಸ್ ಅಳವಡಿಸಿ ಆ ಮೂಲಕ ನಿಗಾ ವಹಿಸಿರುವುದು ಕೂಡ ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ.

ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಅವರು ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ. ಅದರಲ್ಲಿ 5 ಲಕ್ಷ ಮುಂಗಡ ಪಾವತಿ ಮಾಡಿದ್ದಾರೆ. ಸೋಮ ಮತ್ತು ಭರತ್ ಎಂಬುವವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದರು.

ನನ್ನ ವಾಹನಕ್ಕೆ ಜಿಪಿಎಸ್ ಅಳವಡಿಸಿ ಚಲನವಲನ ತಿಳಿಯಲು ಪ್ರಯತ್ನಪಟ್ಟಿದ್ದರು. ಹೀಗಾಗಿ ನನಗೆ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದೇನೆ. ಸುಪಾರಿ ಟೀಂ ನಲ್ಲಿ 20 ಜನ ಇದ್ದಾರೆ. 18 ನಿಮಿಷದ ಆಡಿಯೋ ಇದೆ ಎಂದರು.

Leave a Reply