70 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ
ಕಂದಾಯ ಇಲಾಖೆಯಿಂದ ಮುಂದುವರೆದ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ; ಭೂ ಕಬಳಿಕೆದರಾರು, ಭೂಮಾಫಿಯಾ ವಿರುದ್ಧ ಕಂದಾಯ ಇಲಾಖೆ ಸಮರ
ಕೊಟ್ಟಿಗೇನಹಳ್ಳಿ ಸರ್ವೆ ನಂ.28 ರಲ್ಲಿ 6.5 ಎಕರೆ ಒತ್ತುವರಿ ತೆರವು
ಬೆಂಗಳೂರು: ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು, ಯಲಹಂಕ ತಾಲೂಕು, ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂ.28 ರಲ್ಲಿ ಖಾಸಗಿಯವರಿಂದ ಒತ್ತುವರಿಯಾಗಿದ್ದ ಸುಮಾರು 70 ಕೋಟಿ ರೂ. ಮೌಲ್ಯದ 6.05 ಎಕರೆ ಸರ್ಕಾರಿ ಜಮೀನನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ. ಕಳೆದ ಮೂರು ವಾರದಲ್ಲಿ ಕಂದಾಯ ಇಲಾಖೆ ನಡೆಸುತ್ತಿರುವ ನಾಲ್ಕನೇ ಒತ್ತುವರಿ ಕಾರ್ಯಾಚರಣೆ ಇದಾಗಿದೆ. ಈ ಮೂಲಕ ಭೂ ಒತ್ತುವರಿದಾರರು ಹಾಗೂ ಭೂ ಮಾಫಿಯಾಗೆ ಸರ್ಕಾರ ಬಿಸಿ ಮುಟ್ಟಿಸಿದೆ.
ಕಂದಾಯ ಇಲಾಖೆ ಜವಾಬ್ದಾರಿ ವಹಿಸುತ್ತಿದ್ದಂತೆ ಬೆಂಗಳೂರಿನಾದ್ಯಂತ ಭೂ ಒತ್ತುವರಿ ತೆರವು ಮಾಡುವಂತೆ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನಾನಾ ಕಡೆಗಳಲ್ಲಿ ತೆರವು ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ.
ಅಧಿಕಾರಿಗಳು ಒತ್ತುವರಿದಾರರ ಪಟ್ಟಿ ತಯಾರಿಸಿ ಪ್ರತಿ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಾರೆ. ಬೆಂಗಳೂರಿನ ನಂತರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಒತ್ತುವರಿ ತೆರವು ಮಾಡಲಾಗುವುದು ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದ ಸಚಿವರು, ಜಿಲ್ಲಾವಾರು ಒತ್ತುವರಿ ಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ಯಲಹಂಕ ತಾಲೂಕಿನ ಒತ್ತುವರಿಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಯಲಹಂಕದ ಬಾಗಲೂರಿನ ಬಳಿ 66 ಕೋಟಿ ರೂ. ಮೌಲ್ಯದ 6.07 ಎಕರೆ ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಲಾಗಿತ್ತು. ಇದರ ಬೆನ್ನಿಗೆ ಕಟ್ಟಿಗೇನಹಳ್ಳಿಯಲ್ಲೂ 70 ಕೋಟಿ ರೂ. ಮೌಲ್ಯದ 6.05 ಎಕರೆ ಮೌಲ್ಯದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಯಲಹಂಕ ತಾಲ್ಲೂಕು ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂ.28 ರ ಜಮೀನಿಗೆ ಸಂಬಂಧಿಸಿದಂತೆ, ಗೋಮಾಳದ ಜಮೀನಿಗೆ ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಸಲ್ಲಿಸಲು ಮತ್ತು ಜಮೀನಿನಲ್ಲಿ ಯಾವುದೇ ಖಾತೆ ಅನುಭವವಿಲ್ಲದೇ ಇರುವ ಒತ್ತುವರಿದಾರರನ್ನು ಖುಲ್ಲಾಪಡಿಸಿ ಕ್ರಮವಹಿಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 104 ರ ಅಡಿ ವಿಚಾರಣೆ ನಡೆಸಲು ನಿರ್ಧರಿಸಿ ಪ್ರತಿವಾದಿಗಳಿಗೆ ನೋಟೀಸ್ ಕೂಡ ನೀಡಲಾಗಿತ್ತು. ಅದರಂತೆ ಕಟ್ಟಿಗೇನಹಳ್ಳಿಯ ಸರ್ವೆ ನಂ.28 ರ ಜಮೀನಿನಲ್ಲಿ ತಾಲೂಕು ಮೋಜಿಣಿದಾರರು ಒತ್ತುವರಿ ಎಂದು ಗುರುತಿಸಿದ 6.05 ಎಕರೆ ಜಮೀನನ್ನು ಇಂದು (ಸೋಮವಾರ) ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಒತ್ತುವರಿದಾರರ ವಿವರ:
** ಕೋಗಿಲು ಗ್ರಾಮದ ಸರ್ವೆ ನಂ. 100 ರ ಹಿಡುವಳಿದಾರರಾದ ಉಡುಪ ಅವರಿಂದ ಕಟ್ಟಿಗೇನಹಳ್ಳಿಯ ಸರ್ವೆ ನಂ.28 ರಲ್ಲಿ 0-10 ಗುಂಟೆ ಜಮೀನನ್ನು ಒತ್ತುವರಿ ಮಾಡಿದ್ದು, ಇದನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
** ಎಸ್.ಜಯರಾಮ್ ಬಿನ್ ಸುಬ್ರಮಣ್ಯ ಮೊದಲಿಯಾರ್ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0-20 ಗುಂಟೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
** ಸುಬ್ಬಣ್ಣ ಬಿನ್ ಚಿಕ್ಕಮುನಿಯಪ್ಪ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 2-29 ಎಕರೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
** ದೊಡ್ಡಕ್ಕಮ್ಮ ಕೋಂ ಲೇಟ್ ಕೆ.ಮುನಿಯಪ್ಪ, ಮುನಿರಾಜು ಮತ್ತು ಎಂ. ಮಂಜುನಾಥ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0-12 ಗುಂಟೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
** ವೈ.ಜಿ.ಕೇಶವ ಬಿನ್ ಗೋವಿಂದಪ್ಪ ಅವರಿಗೆ ಸಂಬಂಧಿಸಿದಂತೆ, ನಂ.ಎಲ್ಎನ್ ಡಿ/ಎಸ್ ಆರ್/1/104/78-79 ರಂತೆ ಅಬ್ದುಲ್ ಸತ್ತಾರ್ ರವರಿಗೆ 2-00 ಎಕರೆ ಮಂಜೂರಾಗಿತ್ತು. ನಂತರ ಕ್ರಯವಿಕ್ರಯ ನಡೆದು, ವೈ.ಜಿ ಕೇಶವ ಬಿನ್ ಗೋವಿಂದಪ್ಪ ರವರಿಗೆ ಖಾತೆ ದಾಖಲಾಗಿತ್ತು. ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರದ ಹೆಸರಿಗೆ ಖಾತೆ ದಾಖಲಾಗಿ, ಗೋಮಾಳ ಶೀರ್ಷಿಕೆಯಲ್ಲಿ ಖಾತೆ ಮುಂದುವರೆಯುತ್ತಿದೆ. 2.00 ಎಕರೆ ಜಮೀನಿನ ಪ್ರಕರಣ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ, ಇವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0.05 ಗುಂಟೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
** ರಮೇಶ್ ಬಿನ್ ಚಿಕ್ಕಪಾಪಮ್ಮ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0.12 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಇದೇ ಗ್ರಾಮದಲ್ಲಿ ಬ್ಲಾಕ್ ನಂ.12ರಲ್ಲಿ 0.15 ಗುಂಟೆ ವಿಸ್ತೀರ್ಣದಲ್ಲಿ 4 ಮನೆಗಳು ನಿರ್ಮಾಣವಾಗಿದ್ದು, ತೆರವುಗೊಳಿಸಲು ಮೌಖಿಕವಾಗಿ 2 ದಿನಗಳ ಕಾಲಾವಕಾಶ ಕೋರಿದ್ದರು. ಅದರಂತೆ ಕಾಲಾವಕಾಶ ನೀಡಿ, ಸೂಕ್ತ ಪೊಲೀಸ್ ಬಂದೋಬಸ್ತ್ನೊಂದಿಗೆ ತೆರವುಗೊಳಿಸಲಾಗಿದೆ.



