ಬೆಂಗಳೂರು: ಆಂತರಿಕ ಭದ್ರತಾ ವಿಭಾಗ (ಐಎಸ್ ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಶಂಕಿತ ಉಗ್ರ ಆರೀಫ್ ಅಲಿಯಾಸ್ ಮಹಮದ್ ಆರೀಫ್ ಅಲ್ ಖೈದಾ ಉಗ್ರ ಸಂಘಟನೆಗೆ ಹಣ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಎರಡು ವರ್ಷದ ಹಿಂದಷ್ಟೇ ಉತ್ತರಪ್ರದೇಶದಿಂದ ನಗರಕ್ಕೆ ಬಂದು ನೆಲೆಸಿದ್ದ ಆರೀಫ್, ಉಗ್ರ ಸಂಘಟನೆಯಾದ ಅಲ್ ಖೈದಾ ಮತ್ತು ಐಸಿಸ್ ಸೇರುವ ಕನಸು ಕಂಡು ಹಣ ನೀಡಿರುವುದು ಬಯಲಾಗಿದೆ.
ತಿಂಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದ ಆರೀಫ್ ಅದರಲ್ಲಿ 50 ಸಾವಿರ ರೂಗಳನ್ನು ಅಲ್ ಖೈದಾಗೆ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಎನ್ಐಎ ತನಿಖೆ ವೇಳೆ ಮತ್ತೊಂದು ಪ್ರಕರಣದ ಸಾಮ್ಯತೆ ಇರುವುದು ಕಂಡು ಬಂದಿದ್ದು ಕಳೆದ ಸೆಪ್ಟೆಂಬರ್ನಲ್ಲಿ ತಿಲಕ್ ನಗರದಲ್ಲಿ ದಾಖಲಾದ ಪ್ರಕರಣದ ಜೊತೆಗೆ ಆರೀಫ್ ಪ್ರಕರಣ ಕೂಡ ಸಾಮ್ಯತೆ ಹೊಂದಿದೆ.
ಅಖ್ತರ್ ಹುಸೇನ್ ಹಾಗೂ ಜುಬಾ ನಂತೆ ಆರೀಫ್ ಕೂಡ ಸೋಷಿಯಲ್ ಮೀಡಿಯಾ ಮೂಲಕ ಗೌಪ್ಯ ಸಂಪರ್ಕ ಹೊಂದಿ ವಿದೇಶಿ ಹ್ಯಾಂಡ್ಲರ್ಸ್ ಜೊತೆ ಸಂಪರ್ಕ ಸಾಧಿಸಿ ಚಾಟಿಂಗ್ ಮಾಡುತ್ತಿದ್ದ.
ಅಖ್ತರ್ ಹುಸೇನ್ ಹಾಗೂ ಜುಬಾ ಇಬ್ಬರು ಕೂಡ ಆಲ್ ಖೈದಾ ಜೊತೆಗೆ ನಂಟು ಹೊಂದಿದ್ದು, ಆನ್ಲೈನ್ ಮೂಲಕ ನಂಟು ಬೆಳೆಸಿ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು. ಬಳಿಕ ಯುವಕರಿಗೆ ಹಿಂಸೆ ಹಾಗೂ ಉಗ್ರ ಕೃತ್ಯದ ಬಗ್ಗೆ ಪ್ರಚೋದನೆ ಮಾಡುತ್ತಿದ್ದರು.
ಅಖ್ತರ್ ಹುಸೇನ್ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿಯಾದ ವಿಡಿಯೋ, ಪೋಸ್ಟ್ ಹಾಗೂ ಮೆಸೇಜ್ಗಳ ಮೂಲಕ ಯುವಕರನ್ನ ಸೆಳೆದು ಪ್ರಚೋದನೆ ಮಾಡುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಪುಡ್ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದು, ಉಗ್ರ ಸಂಘಟನೆಯ ಪ್ರಾಥಮಿಕ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದಷ್ಟೆ ಆತನ ಕೆಲಸವಾಗಿತ್ತು. ಅದೇ ರೀತಿ ಆರೀಫ್ ಕೂಡ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದ್ದು ಇವರಿಬ್ಬರ ಪ್ರಕರಣದಲ್ಲೂ ಸಾಮ್ಯತೆ ಇರುವುದು ಬೆಳಕಿಗೆ ಬಂದಿದೆ. ಆದರೆ ಆರೀಫ್ ಉನ್ನತ ವಿದ್ಯಾಭ್ಯಾಸದ ಹಿನ್ನಲೆ ಹೊಂದಿದ್ದ.
ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸೆಳೆದು ಪ್ರಚೋದನೆ: ಗೌಪ್ಯವಾಗಿ ಸೋಷಿಯಲ್ ಮೀಡಿಯಾ ಮೂಲಕ ಯುವಕರನ್ನ ಸೆಳೆದು ಪ್ರಚೋದನೆಗೆ ಯತ್ನಿಸಿದ್ದ. ಬೇರೆ ಬೇರೆ ಸೋಷಿಯಲ್ ಮೀಡಿಯಾ ಮೂಲಕ ಒಬ್ಬರಿಗೊಬ್ಬರು ಸಂಪರ್ಕವಿಲ್ಲದೆ ತಮ್ಮ ಕಾರ್ಯ ಸಾಧನೆ ಮಾಡುತ್ತಿದ್ದರು.
ತಿಲಕ್ ನಗರದಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ತಂಡಗಳು ಆರೀಫ್ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ವಶಪಡಿಸಿಕೊಂಡ ಆರೀಫ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿರುವ ಗೌಪ್ಯ ಮಾಹಿತಿ ಮಾಹಿತಿಯನ್ನು ಅಧುನಿಕ ತಂತ್ರಜ್ಞಾನ ಬಳಸಿ ಪರಿಶೀಲನೆ ನಡೆಸಲಾಗುತ್ತಿದೆ.
ಈ ನಡುವೆ ಶಾರಿಕ್, ಮಾಝ್, ಅಖ್ತರ್ ಹುಸೇನ್, ಜುಬಾ, ಆರೀಫ್ ಎಲ್ಲರೂ ಒಂದೆ ಸಂಘಟನೆ ಸೇರಿದ್ದು, ಇವರೆಲ್ಲರೂ ಒಟ್ಟಿಗೆ ಇದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಶಾರಿಕ್ ಸಹ ಅಲ್ ಖೈದಾ ಸಂಘಟನೆಗೆ ಸೇರಿ ಸ್ಫೋಟ ಮಾಡುವ ಬಗ್ಗೆ ತರಬೇತಿ ಪಡೆಯುತ್ತಿದ್ದು,ಅರೋಪಿಗಳ ಕೇಸ್ ಎನ್ಐಎ ಬಳಿಯಲ್ಲೆ ಇದೆ. ಇದೇ ರೀತಿ ರಾಜ್ಯದಲ್ಲಿ ಇನ್ನೂ ಹಲವರು ಅಲ್ ಖೈದಾ ಸೇರಿರುವ ಶಂಕೆ ವ್ಯಕ್ತವಾಗಿದೆ.




